Sunday, June 28, 2020

Stories for kids - 7 - Shishupala

ಶಿಶುಪಾಲನ ವಧೆ 

ಶಿಶುಪಾಲ ಹುಟ್ಟಿದಾಗ ಅವನಿಗೆ ಮೂರು ಕಣ್ಣು ನಾಲ್ಕು ಕಯ್ಯಿ ಇತ್ತು. ಧ್ವನಿ ಕತ್ತೆಯ ಕೂಗಿನಂತೆ.  ಇದರಿಂದ ಬೇಜಾರಾಗಿದ್ದ ಅವನ ತಾಯಿ ಶ್ರುತಶ್ರವಳಿಗೆ ಆಕಾಶವಾಣಿಯು ಹೇಳಿತು 'ಈ ಮಗುವನ್ನು ಒಬ್ಬ ಮಹಾಪುರುಷ ಎತ್ತಿಕೊಂಡಾಗ ಎಲ್ಲಾ ಅವಲಕ್ಷಣಗಳು ಸರಿಹೋಗುತ್ತದೆ. ಆದರೆ ಶಿಶುಪಾಲನ ಮೃತ್ಯು ಅವನ ಕಯ್ಯಿಂದಲೇ' 
ತನಗೆ ತಿಳಿದ ಎಲ್ಲಾ ಮಹಾಪುರುಷರು ಸಾಧು ಸಂತರ ಕಯ್ಯಿಗೆ ಮಗುವನ್ನು ಕೊಟ್ಟು ನೋಡುತ್ತಿದ್ದಳು. ಯಾರು ಎತ್ತಿಕೊಂಡರು ಸರಿಹೋಗಲಿಲ್ಲ. ಒಂದು ದಿನ ಅಣ್ಣ ವಸುದೇವನ ಮಗನಾದ ಶ್ರೀ ಕೃಷ್ಣ ಆ ಮಗುವನ್ನು ಎತ್ತಿ ಕೊಂಡನು. ಥಟ್ಟನೆ ಶಿಶುಪಾಲನ ಎಲ್ಲಾ ವಿಚಿತ್ರ ಲಕ್ಷಣಗಳು ಮಾಯವಾಗಿ ಒಂದು ಸಾಮಾನ್ಯ ಮನುಷ್ಯ ಶಿಶುವಿನಂತೆ ಆದನು. ಇದನ್ನು ನೋಡಿ ಶ್ರುತಶ್ರವಳಿಗೆ ಸಂತೋಷವಾಯಿತು. ಆದರೆ ಶಿಶುಪಾಲನ ಮೃತ್ಯು ಕೃಷ್ಣನ ಕೈಯಲ್ಲಿ ಎಂದು ತಿಳಿಯಿತು. ಆಗ ಅವಳು ಕೃಷ್ಣನನ್ನು ಕೇಳಿಕೊಂಡಳು - 'ಕೃಷ್ಣ, ನನ್ನ ಮಗ ಶಿಶುಪಾಲನ ೧೦೦ ತಪ್ಪುಗಳನ್ನು ನೀನು ಕ್ಷಮಿಸುತ್ತೀನಿ ಅಂತ ಪ್ರಮಾಣ ಮಾಡು.'
ಕೃಷ್ಣ ಒಪ್ಪಿಕೊಂಡನು. 

ಎಷ್ಟೋ ವರ್ಷಗಳು ಕಳೆದವು. ಶಿಶುಪಾಲನು ದೊಡ್ಡವನಾದನು. ಯುಧಿಷ್ಠಿರನಿಗೆ ಇಂದ್ರಪ್ರಸ್ಥದ ಪಟ್ಟಾಭಿಷೇಕ ಮಾಡಿದರು. ಯುಧಿಷ್ಠಿರ ರಾಜಸೂಯ ಯಜ್ಞ ಮಾಡಿದ. ರಾಜಸೂಯ ಯಜ್ಞಕ್ಕೆ ಭೀಷ್ಮ, ದ್ರೋಣ, ಕೃಪಾ, ತಮ್ಮಂದಿರಾದ ಕೌರವರು, ಅಂಗರಾಜ ಕರ್ಣ, ಮಾವ ಶಕುನಿ ಹೀಗೆ ಎಲ್ಲಾ ದೊಡ್ಡ ವ್ಯಕ್ತಿಗಳನ್ನು ಕರೆದನು. ಶಿಶುಪಾಲನನ್ನೂ ಕರೆದನು. ರಾಜಸೂಯ ಯಜ್ಞದಲ್ಲಿ ಒಬ್ಬರು ಮುಖ್ಯ ಅತಿಥಿಯಾಗಿರುತ್ತಾರೆ. ಯುಧಿಷ್ಠಿರ ಶ್ರೀ ಕೃಷ್ಣನನ್ನು ಮುಖ್ಯ ಅತಿಥಿಯಾಗಿ ಸಿಂಹಾಸನದ ಮೇಲೆ ಕೂಡಿಸಿದನು. 

ಶಿಶುಪಾಲನ ಕೊನೆ ಹತ್ತಿರ ಬಂದಿತ್ತು ಅಂತ ಕಾಣತ್ತೆ. ತುಂಬಿದ ಸಭೆಯಲ್ಲಿ ಕೋಪದಲ್ಲಿ ಎದ್ದು ಕೃಷ್ಣ ಮುಖ್ಯ ಅತಿಥಿ ಆಗಲು ಅರ್ಹನಲ್ಲ ಎಂದು ಹೇಳಿದನು. ಕೃಷ್ಣನನ್ನು ಅವಮಾನಿಸಲು ಆರಂಭಿಸಿದನು.
 
'ಹಸುಗಳನ್ನು ಕಾಯುವವನು, ಸಿಂಹಾಸನದಮೇಲೆ ಏನು ಮಾಡುತ್ತಿದ್ದಾನೆ?!'

'ಬೆಣ್ಣೆ ಕದಿಯುವವನೂ ಕಳ್ಳನೇ, ಕಳ್ಳನನ್ನ ಹೀಗೆ ಮುಖ್ಯ ಅತಿಥಿಯಾಗಿ ಕೂಡಿಸಿರುವುದು ಇದೇ ಮೊದಲ ಸಾರಿ ಇರಬೇಕು!'

'ಜರಾಸಂಧನನ್ನು ಎದುರಿಸಲು ಆಗದೆ ಓಡಿ ಹೋದ ಹೇಡಿ!'

ಹೀಗೆ ಕೃಷ್ಣನನ್ನು ಅವಮಾನಿಸಿದನು. ಅಣ್ಣ ಬಲರಾಮನಿಗೆ ಮೊದಲೇ ಕೋಪ ಜಾಸ್ತಿ. ಆದರೂ ಕೃಷ್ಣ ಅವನಿಗೆ ಸುಮ್ಮನಿರಲು ಹೇಳಿ ಶಿಶುಪಾಲನಿಗೆ ಮುಂದು ವರೆಯಲು ಹೇಳಿದ. ಕೃಷ್ಣ ಕೈಯಲ್ಲಿ ಒಂದು ಅಡಿಕೆ ತಟ್ಟೆ ಇಟ್ಟುಕೊಂಡಿದ್ದನು. ತನಗೆ ಆಗುತ್ತಿದೆ ಅವಮಾನಗಳನ್ನು  ಅಡಿಕೆಗಳ ಮೂಲಕ ಲೆಕ್ಕ ಹಾಕುತ್ತಿದ್ದನು. ಪ್ರತಿಯೊಂದು ಅವಮಾನಕ್ಕೂ ಒಂದು ಅಡಿಕೆಯಂತೆ ಒಂದು ಸಣ್ಣ ಗುಡ್ಡೆಗೆ ಹಾಕುತ್ತಿದ್ದನು. ೧೦೦ ಅವಮಾನಗಳು ಆದಾಗ, ಕೃಷ್ಣ ಎಚ್ಚರಿಕೆ ನೀಡಿದನು. 
'ಶಿಶುಪಾಲ, ಅತ್ತೆ ಶ್ರುತಶ್ರವಳಿಗೆ ಮಾತು ಕೊಟ್ಟಂತೆ ನಿನ್ನ ೧೦೦ ತಪ್ಪುಗಳನ್ನು ಕ್ಷಮಿಸಿದ್ದೀನಿ. ಇನ್ನು ಒಂದೂ ತಪ್ಪು ಕ್ಷಮಿಸುವುದಿಲ್ಲ ನಾನು. '

ಆದರೆ ಶಿಶುಪಾಲ ನಿಲ್ಲಲಿಲ್ಲ.
  
'ಹೋಗೋ ಹೇಡಿ! ಹೆಂಗಸರ ವಸ್ತ್ರ ಕದಿಯುತ್ತಿದ್ದ ನೀನು ನನಗೆ ಎಚ್ಚರಿಕೆ ಕೊಡ್ತೀಯಾ?!'

ಅದು ಶಿಶುಪಾಲನ ೧೦೧ನೇ ತಪ್ಪು. ಶ್ರೀ ಕೃಷ್ಣನು ನಿಂತುಕೊಂಡು ತನ್ನ ಸುಧರ್ಶನ ಚಕ್ರದಿಂದ ಶಿಷ್ಪಲನ ತಲೆ ಕತ್ತರಿಸಿದನು. 

ವಾಸ್ತವಿಕವಾಗಿ, ಶಿಶುಪಾಲ ಮಹಾವಿಷ್ಣುವಿನ ದ್ವಾರಪಾಲನಾದ 'ಜಯ'ನು. ಒಂದು ಋಷಿಯ ಶಾಪದಿಂದ ಜಯ-ವಿಜಯರು ಮೂರುಸಾರಿ ಭೂಲೋಕದಲ್ಲಿ ವಿಷ್ಣುವಿನ ವೈರಿಗಳಾಗಿ ಜನಿಸಿದ್ದರು. ಮೊದಲು ಹಿರಣ್ಯಕಶ್ಯಪು-ಹಿರಣ್ಯಾಕ್ಷರಾಗಿ, ಎರಡನೇ ಸಾರಿ ರಾವಣ-ಕುಂಭಕರ್ಣರಾಗಿ   ಮೂರನೇ ಹಾಗೂ ಕೊನೆಯ ಸಾರಿ ಶಿಶುಪಾಲ-ದಂತವಕ್ರರಾಗಿ. 

ಕೃಷ್ಣ ಸುದರ್ಶನ ಚಕ್ರ ಬಿಟ್ಟಾಗ ತನ್ನ ಬೆರಳನ್ನು ಸ್ವಲ್ಪ ಗಾಯ ಮಾಡಿಕೊಂಡನು. ಬೆರಳಿನಿಂದ ರಕ್ತ ಬರಲು ಶುರುವಾಯಿತು. ಸಭೆಯಲ್ಲೇ ಇದ್ದ ದ್ರೌಪದಿಯೂ ತನ್ನ ಸೆರಗಿನಿಂದ ಒಂದು ಸಣ್ಣ ತುಂಡು ಬಟ್ಟೆ ಹರಿದು ಬೆರಳಿಗೆ ಕಟ್ಟಿದಳು. 
ಭಾವುಕನಾಗಿ ಕೃಷ್ಣ - 'ಕೃಷ್ಣೆ! ನೀನು ನನ್ನ ಗಾಯಕ್ಕೆ ಹೀಗೆ ಬಟ್ಟೆ ಕಟ್ಟಿ ನನ್ನನ್ನು ನಿನ್ನ ಋಣಿಯಾಗಿಸಿಬಿಟ್ಟೆ. ತಂಗಿ, ನಿನ್ನ ಈ ಋಣ ಮುಂದೆ ತೀರಿಸುತ್ತೀನಿ.'  ಎಂದನು. 

ಹೀಗೆ ಮುಗಿಯಿತು ಶಿಶುಪಾಲನ ಕಥೆ. 

ಏನಿರಬಹುದು ನೀತಿ -

೧.  'ಲಲಾಟ ಲಿಖಿತ ರೇಖಾ ಪರಿಮಾರ್ಶ್ತುಂ ನಾ ಶಕ್ಯತೇ ' - ಅಂದರೆ ಹಣೆಯಲ್ಲಿ ಬರೆದಿರುವುದನ್ನು ಪರಿವರ್ತಿಸಲು ಸಾಧ್ಯವಿಲ್ಲ. ಶಿಶುಪಾಲನಿಗೆ ಗೊತ್ತಿತ್ತು ಕೃಷ್ಣನ ಕಯ್ಯಲ್ಲಿಯೇ ತನ್ನ ಸಾವು ಅಂತ ಆದರೂ ಅವನು ಸುಮ್ಮನಿರಲಿಲ್ಲ.
೨. ನಾವು ಮಾಡುವ ಒಳ್ಳೆ ಕರ್ಮಗಳು ನಮಗೆ ಮುಂದೆ ಸಹಾಯ ಮಾಡುತ್ತವೆ. ದ್ರೌಪದಿ ಕೃಷ್ಣನ ಬೆರಳಿಗೆ ಬಟ್ಟೆ ಕಟ್ಟಿದಾಗ ಅವಳಿಗೆ ಮುಂದೆ ಅವಳ ಸಹಾಯಕ್ಕೆ ಕೃಷ್ಣ ಬರುವನು ಎಂದು ತಿಳಿದಿರಲಿಲ್ಲ. ಕೇವಲ ಅಣ್ಣನಂಥ ಕೃಷ್ಣನಿಗೆ ಸಹಾಯ ಮಾಡುವುದೊಂದೇ ಅವಳಮನಸ್ಸಿನಲ್ಲಿ ಇತ್ತು.   

No comments:

Post a Comment